
ಔರಾದ : ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರ ವಾಗಿದೆ ರೈತರ ಏಳಿಗೆಗೆ ಪೂರಕವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿಕೆ ಸುಹಾಸಿನಿ ಬೇಹನಜೀ ಅಭಿಪ್ರಾಯಪಟ್ಟರು.
ಪಟ್ಟಣದ ಕನಕ ಭವನದಲ್ಲಿ ಬ್ರಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಡೆದ ರಾಷ್ಟ್ರೀಯ ಕಿಸಾನ್ ದಿವಸ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಇಂದು ಅನ್ನದಾತನು ದೇಶಕ್ಕೆ ಅನ್ನ ನೀಡುವ ಪರಮ ಪುಣ್ಯ ಕಾರ್ಯದಲ್ಲಿ ತೊಡಗಿದ್ದಾನೆ, ಆದರೆ ಇನ್ನೂ ಸಹ ಅನೇಕ ಅನ್ನದಾತರು ಸರಿಯಾದ ಬೇಸಾಯ ಪದ್ಧತಿ ಅನುಸರಿಸದೆ ಕಷ್ಟ ಅನುಭವಿಸುತ್ತಿದ್ದಾರೆ ಸರ್ಕಾರ ಅಂತಹ ಅನ್ನದಾತರಿಗೆ ಪೂರಕವಾದ ಬೇಸಾಯ ಪದ್ಧತಿಗಳ ಬಗ್ಗೆ ತರಬೇತಿ ನೀಡಿ ಅವರನ್ನು ಕಷ್ಟದಿಂದ ಮುಕ್ತಗೊಳಿಸುವ ಕಾರ್ಯ ಮಾಡಬೇಕಾಗಿದೆ.
ಪರಿಸರ ಸಂರಕ್ಷಣೆ ಬಗ್ಗೆ ನಾವು ಹಲವು ಮಾತನಾಡುತ್ತೇವೆ ಆದರೆ ಎಲ್ಲರಿಗಿಂತ ಪರಿಸರ ಸಂರಕ್ಷಣೆ ಮಾಡುವವರು ನಮ್ಮ ಅನ್ನದಾತರು. ಗೋವಿನ ರಕ್ಷಣೆ ದೇಶಿ ಔಷಧಿ ಜೊತೆಗೆ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ ರೈತ ಇಲ್ಲದೆ ನಮ್ಮ ದೇಶ ಇಲ್ಲ ರೈತರು ಜೈವಿಕ ತಂತ್ರಜ್ಞಾನದ ಜೊತೆಗೆ ದೈವಿಕವಾಗಿ ಬೇಸಾಯ ಮಾಡಿ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಎಚ್. ಅವರು ಮಾತನಾಡಿ ತಾಲೂಕಿನ ಕೃಷಿಕ ಸಮಾಜಕ್ಕೆ ಸನ್ಮಾನಿಸಿ ಗೌರವಿಸುತ್ತಿರುವ ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಸಂಸ್ಥೆ ಕಾರ್ಯ ಶ್ಲಾಘನೀಯವಾದ್ದು, ಕೃಷಿ ಇಲಾಖೆ ರೈತರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಾ ಬಂದಿದೆ ಅನೇಕ ರೈತರ ಇದರ ಬಗ್ಗೆ ಮಾಹಿತಿ ಇಲ್ಲದೆ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಸರ್ಕಾರ ರೈತರ ನೆರವಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಲ್ಲ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಔರಾದ ಹಾಗೂ ಕಮಲನಗರ ತಾಲೂಕಿನ ರೈತ ಬಾಂಧವರಿಗೆ ಬ್ರಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸುಮಾರು ಎರಡುನೂರು ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ತರಬೇತಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಫಯ್ಯುಮ ಖುರೇಶಿ, ಜಿಲ್ಲಾ ರೈತ ಸಂಘ ಕಾರ್ಯದರ್ಶಿ ಶ್ರೀಮಂತ ಬಿರಾದಾರ, ತಾಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಪ್ರವೀಣ ಕುಲಕರ್ಣಿ, ತಾಪಂ ತರಬೇತಿ ಸಂಯೋಜಕ ರಾಜೇಂದ್ರ ಮಾಳಿ, ಡಾ.ಗಂಗಾರೆಡ್ಡಿ, ಸಂಗಪ್ಪ ಘಾಟೆ, ಶಿವಕುಮಾರ ಗೀರಣೆ, ಅನಿಲ ದ್ಯಾಡೆ ರಾಮ ರೆಡ್ಡಿ ಗಂಗಾಪೂರೆ, ಚಂದ್ರಕಾಂತ ರೆಡ್ಡಿ, ಬಿಕೆ ಬಾಲಾಜಿ, ಬಿಕೆ ಶಾಂತಾ, ಬಿಕೆ ಛಾಯಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.