
ಔರಾದ:-ಮಾಜಿ ಸಚಿವರು ಹಾಲಿ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಚಿಮ್ಮೇಗಾಂವ ವ್ಯಾಪ್ತಿಯಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನಿಂದ ನಿರ್ಮಾಣಗೊಳ್ಳುತ್ತಿರುವ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರಕ್ಕೆ ನ.8ರಂದು ದಿಢೀರ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಒತ್ತಡ ತಂದು, ನಿರಂತರ ಪ್ರಯತ್ನಪಟ್ಟು ಔರಾದ(ಬಿ) ಕ್ಷೇತ್ರಕ್ಕೆ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರ ತಂದಿದ್ದೇನೆ. ಹಿಂದೆ ಎರಡು ಸಲ ವಿಫಲವಾಗಿತ್ತು. ಪಟ್ಟು ಬಿಡದೇ ಕೇಂದ್ರ ಸಚಿವರನ್ನು ಭೇಟಿಯಾಗಿ ಯೋಜನೆ ಬರುವಂತೆ ಮಾಡಿದ್ದೇನೆ. ಕೆಲಸ ಸರಿಯಾಗಿ ಆಗಬೇಕು. ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಕೆಲಸದಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ನೇರವಾಗಿ ನನ್ನನ್ನು ಭೇಟಿಯಾಗಬೇಕು. ಅದನ್ನು ಬಿಟ್ಟು ರೈತರನ್ನು ಏಕೆ ಸತಾಯಿಸುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಹೊಲಗಳಿಗೆ ಹೋಗಲು ಇರುವ ರಸ್ತೆಗಳನ್ನು ಮುಚ್ಚಿ ಹಾಕಿದ್ದು, ಪ್ರತಿದಿನ ನಮ್ಮ ಹೊಲಕ್ಕೆ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಷ್ಟು ಸಲ ಹೇಳಿದರು ಅಧಿಕಾರಿಗಳು ಕೇಳುತ್ತಿಲ್ಲವೆಂದು ಮತ್ತು ಜಮೀನು ನೀಡಿದ ಎಲ್ಲರಿಗೂ ಸಮಾನವಾಗಿ ಹಣ ಪಾವತಿಸದೇ ತಾರತಮ್ಯ ಮಾಡಲಾಗುತ್ತಿದೆ. ಕೇಳಲು ಹೋದರೆ ಸರಿಯಾಗಿ ಮಾತನಾಡುತ್ತಿಲ್ಲವೆಂದು ರೈತರು ಶಾಸಕರ ಎದುರು ಸಮಸ್ಯೆಗಳನ್ನು ಹಂಚಿಕೊAಡರು.
ಇದರಿಂದ ಕೋಪಗೊಂಡ ಶಾಸಕರು, ರಸ್ತೆಗಳನ್ನೆಲ್ಲ ಮುಚ್ಚಿ ಹಾಕಿದರೆ ರೈತರು ಹೊಲಗಳಿಗೆ ಹೇಗೆ ಹೋಗಬೇಕು ? ಕೂಡಲೇ ಸಮಸ್ಯೆ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಪರಿಹಾರಧನ ವಿತರಣೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ನಿಯಮದಂತೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಹಾರಧನ ಕಲ್ಪಿಸಬೇಕು. ಜಮೀನಿಗೆ ಸಂಬAಧಿಸಿದ ಏನಾದರೂ ಸಮಸ್ಯೆಗಳಿದ್ದರೆ ತಹಸೀಲ್ದಾರರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಸಣ್ಣ ಪುಟ್ಟ ಕೈಗಾರಿಕೆಗಳನ್ನು ತರುವ ಸಂಕಲ್ಪ ಹೊಂದಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಈ ದಿಶೆಯಲ್ಲಿ ಕಮಲನಗರ ತಾಲ್ಲೂಕಿಗೆ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರವನ್ನು ತರಲಾಗಿದೆ. ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ ಜಮೀನು ಕುರಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದು, ಇದೀಗ ಕೆಲಸ ಆರಂಭಗೊAಡಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.
ನನ್ನ ನಿರಂತರ ಪ್ರಯತ್ನಗಳಿಂದಾಗಿ ಚಿಮ್ಮೇಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2147 ಕೋಟಿ ವೆಚ್ಚದ ಬೃಹತ್ ಪವರ್ ಗ್ರಿಡ್ ಪವರ್ ಸಬ್ ಸ್ಟೇಷನ್ ನಿರ್ಮಾಣಗೊಳ್ಳುತ್ತಿದೆ. ರೈತರಿಗೂ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಜೊತೆಗೆ ಮುಂದಿನ ದಿನಗಳಲ್ಲಿ ಸಣ್ಣ-ಪುಟ್ಟ ಕೈಗಾರಿಕೆಗಳನ್ನು ತರಲು ಪೂರಕವಾಗಲಿದೆ. ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ಹೇಳಿದರು.
ರೈತರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ರೈತರೊಂದಿಗೆ ಕೂಡ ಮಾತನಾಡಿದ್ದೇನೆ. ಜಮೀನು ನೀಡಿದ ರೈತರು ಅತ್ಯಂತ ಬಡವರಾಗಿದ್ದು, ಬಹುತೇಕರು 2-3 ಎಕರೆ ಜಮೀನು ಹೊಂದಿದವರಿದ್ದಾರೆ. ಅವರಿಗೆ ಸಮರ್ಪಕ ಪರಿಹಾರ ಸಿಗದಿದ್ದಲ್ಲಿ ಬೀದಿಗೆ ಬರಬೇಕಾಗುತ್ತದೆ. ಹಾಗಾಗಿ ಯಾವೊಬ್ಬ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದು, ನಮ್ಮ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ ಮಾತನಾಡಿ, 2147 ಕೋಟಿ ಮೊತ್ತದ ಯೋಜನೆ ಇದಾಗಿದ್ದು, 163 ಎಕರೆ ಜಮೀನಿನಲ್ಲಿ ಪವರ್ ಗ್ರಿಡ್ ಸೆಂಟರ್ ನಿರ್ಮಿಸಲಾಗುತ್ತಿದೆ. 675 ಕೆ.ವಿ ಪವರ್ ಟ್ರಾನ್ಸ್ಮಿಷನ್ ಸಾಮರ್ಥ್ಯದ ಕರ್ನಾಟಕ ಮೊದಲ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರ ಇದಾಗಿದೆ. ಕ್ಷೇತ್ರದಲ್ಲಿ 12 ಸಾವಿರ ಎಕರೆಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವ ಯೋಜನೆಯೂ ಇದ್ದು, ಜಮೀನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಮಲನಗರ ತಹಸೀಲ್ದಾರರಾದ ಅಮಿತ್ ಕುಲಕರ್ಣಿ, ನಿಗಮದ ಇಂಜಿನೀಯರ್ ಶಿವರಾಜ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಅನೀಲ ಬಿರಾದಾರ, ಧನಾಜಿ ರಾಠೋಡ್, ಮಹಾದೇವ ಮಾಳಕಾರೆ, ಸಂಜು ಪಾಟೀಲ ಚಿಮ್ಮೇಗಾಂವ, ರಾಜಕುಮಾರ ಸೋನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.