
ಬೀದರ : ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕನ್ನಡ ಭವನದಲ್ಲಿ ಗ್ರಂಥಾಲಯವನ್ನು ಆರಂಭಿಸಲಾಗಿದ್ದು, ಈ ಗ್ರಂಥಾಲಯಕ್ಕೆ ಜಿಲ್ಲೆಯ ಕವಿ, ಸಾಹಿತಿಗಳು ರಚಿಸಿರುವ ಕೃತಿಗಳ ೨ ಪ್ರತಿಗಳನ್ನು ಸಲ್ಲಿಸುವಂತೆ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮನವಿ ಮಾಡಿದ್ದಾರೆ.
ಕವಿ, ಸಾಹಿತಿಗಳು ತಮ್ಮ ರಚನೆ ಅಥವಾ ಸಂಪಾದನೆಯ ೨ ಕೃತಿಗಳನ್ನು ನೇರವಾಗಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭವನ, ಗುರುನಾನಕ-ಚಿಕಪೇಟ್ ರಸ್ತೆ, ಲಾವಣ್ಯ ಫಂಕ್ಷನ್ ಹಾಲ್ ಎದುರು, ಬೀದರ ವಿಳಾಸಕ್ಕೆ ಅಥವಾ ಶ್ರೀ ಸಿದ್ಧಾರೂಢ ಭಾಲ್ಕೆ
( 9972525899). ಅವರನ್ನು ಸಂಪರ್ಕಿಸಿ ನೀಡಬಹುದು.
ಸಾಹಿತ್ಯಾಸಕ್ತರೂ ಸಹ ತಮ್ಮ ಬಳಿ ಇರುವ ಓದಿ ಮುಗಿಸಿರುವ ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ನೀಡಲು ಅವಕಾಶ ಇದೆ. ನಾಡಿನ ಕಲೆ, ಸಾಹಿತ್ಯ, ಸಂಗೀತ, ತತ್ವಪದ, ಕಥೆ, ಕಾದಂಬರಿ, ಇತಿಹಾಸ ಇತ್ಯಾದಿ ಪುಸ್ತಕಗಳನ್ನು ರದ್ದಿಗೆ ಹಾಕದೇ ಪರಿಷತ್ತಿಗೆ ನೀಡಿದರೆ ಮುಂದಿನ ಪೀಳಿಗೆಗೆ ಅಧ್ಯಯನಕ್ಕೆ ಅನುಕೂಲವಾಗುವುದು.
ಕಸಾಪ ಗ್ರಂಥಾಲಯವನ್ನು ಮಾದರಿ ಗ್ರಂಥಾಲಯವನ್ನಾಗಿ ಮಾಡಲು ನಿರ್ಧರಿಸಲಾಗಿದ್ದು, ಬೀದರ ಜಿಲ್ಲೆಯ ಸಮಗ್ರ ಸಾಹಿತ್ಯದ ಕೃತಿಗಳನ್ನು ಸಂಗ್ರಹಿಸಿ ಆಸಕ್ತ ಓದುಗರಿಗೆ ಅಧ್ಯಯನಕ್ಕೆ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲಕೃತಿಗಳ ಡಿಜಿಟಲೀಕರಣ ಮಾಡುವ ಉದ್ದೇಶವೂ ಪರಿಷತ್ತಿಗಿದೆ ಎಂದು ತಿಳಿಸಿದ್ದಾರೆ.